Showing posts with label ಶಾಸ್ತ್ರೋಪಸ್ಕೃತ. Show all posts
Showing posts with label ಶಾಸ್ತ್ರೋಪಸ್ಕೃತ. Show all posts

Tuesday, February 2, 2016

Neeti Shataka Shloka 11

ಶಾಸ್ತ್ರೋಪಸ್ಕೃತ ಶಬ್ದ ಸುಂದರಗಿರಃ ಶಿಷ್ಯಪ್ರದೇಯಾಗಮಾಃ
ವಿಖ್ಯಾತಾಃ ಕವಯೋ ವಸಂತಿ ವಿಷಯೇ ಯಸ್ಯ ಪ್ರಭೋರ್ನಿರ್ಧನಾಃ |
ತಜ್ಜಾಡ್ಯಂ ವಸುಧಾಧಿಪಸ್ಯ ಸುಧಿಯಸ್ತ್ವರ್ಥಂ ವಿನಾಪೀಶ್ವರಾಃ
ಕುತ್ಸ್ಯಾಃ ಸ್ಯುಃ ಕುಪರೀಕ್ಷೈರ್ನ ಮಣಯೋ ಯೈರರ್ಘತಃ ಪಾತಿತಾಃ ||11||

शास्त्रोपस्कृत शब्द सुन्दरगिरः शिष्यप्रदेयागमाः
विख्याताः कवयो वसंति विषये यस्य प्रभोर्निर्धनाः|
तज्जाड्यं वसुधाधिपस्य सुधियस्त्वर्थं विनापीश्वराः
कुत्स्याःस्युः कुपरीक्षैर्न मणयो यैरर्घतः पातिताः||11||

śāstrōpaskr̥ta śabda sundaragiraḥ śiṣyapradēyāgamāḥ
vikhyātāḥ kavayō vasanti viṣayē yasya prabhōnirdhanāḥ |
tajjāḍyaṁ vasudhādhipasya sudhiyastvarthaṁ vināpīśvarāḥ
kutsyāḥsyuḥ kuparīkṣairna maṇayō yairarghataḥ pātitāḥ ||11||

ಛಂದಸ್ಸು: ಈ ಪದ್ಯ ಶಾರ್ದೂಲವಿಕ್ರೀಡಿತಾ ವೃತ್ತದಲ್ಲಿದೆ...(೧೯ಅಕ್ಷರಗಳ ೪ ಸಾಲುಗಳಿಂದಾದ ಒಟ್ಟು ೭೬ ಅಕ್ಷರಗಳ ಛಂದಸ್ಸಿದು)

Meter: This verse is in the śardūlavikrīditā meter (19 syllables per quarter, 4 quarters, total 76 syllables).

ಭರ್ತೃಹರಿ ಈತನಕದ ಹತ್ತು ಶ್ಲೋಕಗಳಲ್ಲಿ ಮೂರ್ಖರು ಹೇಗೆ ಇರುತ್ತಾರೆ, ಅವರ ಸ್ವರೂಪ ಎಂಥದು ಎಂಬುದನ್ನು ವರ್ಣಿಸಿದ.  ಇಲ್ಲಿಂದ ಮುಂದೆ ಸಮಾಜದಲ್ಲಿನ ವಿದ್ವಜ್ಜನರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತಾನೆ...

ವಿದ್ವಾಂಸರಾದವರು ಎಂದೂ ಉಡಾಫೆಯ ಮಾತುಗಳನ್ನಾಡುವುದಿಲ್ಲ. ತಾವು ಆಡುವ ಪ್ರತಿಯೊಂದು ಮಾತಿಗೆ ಶಾಸ್ತ್ರದ ಆಧಾರ ಕೊಟ್ಟು ಮಾತನಾಡುತ್ತಾರೆ. (ತದುಕ್ತಂ ಬ್ರಹ್ಮಾಂಡೆ, ತದುಕ್ತಂ ಸ್ಕಾಂದೆ... ಹೀಗೆ) ಆದ್ದರಿಂದ ಅವರಾಡುವ ಒಂದೊಂದು ಶಬ್ದವೂ, ವಾಕ್ಯವೂ ಶಾಸ್ತ್ರಗಳ ಹಿನ್ನೆಲೆಯಿಂದ ಪರಿಷ್ಕಾರಗೊಂಡದ್ದು ಮತ್ತು ಪ್ರತಿಯೊಂದು ಮಾತೂ ಶಾಸ್ತ್ರದ ಪುರಸ್ಕಾರದಿಂದ ಅಲಂಕಾರಗೊಂಡದ್ದಾಗಿರುತ್ತದೆ. ಅವರ ಮಾತಿನ ಮೋಡಿ, ಶಬ್ದಗಳ ಆಯ್ಕೆ , ಕೇಳುವುದಕ್ಕೆ ಮಧುರವಾಗಿದ್ದು ಆಡು ಭಾಷೆಗೆ ಒಗ್ಗುವ ನಡೆಯಲ್ಲಿ ಮಾತನಾಡುತ್ತಾರೆ... ಭಾಷೆಯ ಬನಿಯನ್ನು (ಭಾಷೆಯ ಗುಟ್ಟನ್ನು) ಅರಿತು ಸ್ವಚ್ಛವಾಗಿ ಮಾತನಾಡುವುದರಿಂದ ಅವರಾಡುವ ಮಾತು ಕೇಳುವುದಕ್ಕೆ ಇಂಪಾಗಿದ್ದು , ಮಧುರವಾಗಿದ್ದು , ಕೇಳಿದವರಿಗೆ ಸಹಜವಾಗಿ ಅರ್ಥವಾಗುತ್ತದೆ.  ಅಂಥಹ ವಿಂದ್ವಾಸರು ಮಾತ್ರ ತಮ್ಮ ಶಿಷ್ಯರಿಗೆ ಆಗಮವನ್ನು ದಾನಮಾಡಬಲ್ಲರು.. ಅರ್ಥಾತ್, ಶಾಸ್ತ್ರದಲ್ಲಿ ಹೇಳಿದ್ದನ್ನು ಶಿಷ್ಯರಿಗೆ ಅರ್ಥವಾಗುವಂತೆ ಪಾಠ, ಪ್ರವಚನ ಮಾಡಬಲ್ಲರು...

ಆದರೆ  ತಿಳಿದುಕೊಂಡವರಿಗೆಲ್ಲ ಇನ್ನೊಬ್ಬರಿಗೆ ತಿಳಿಹೇಳುವ ಶಕ್ತಿ ಇರಬೇಕಾಗಿಲ್ಲ.  ಅದು ಬೇರೆಯೇ ಕಲೆ... ತಿಳಿದುಕೊಳ್ಳುವುದು ಒಂದು ಕಲೆಯಾದರೆ, ತಿಳಿದುಕೊಂಡದ್ದನ್ನು ಇನ್ನೊಬ್ಬರಿಗೆ ತಿಳಿಹೇಳುವುದು ಮತ್ತೊಂದು ಕಲೆ...  ತಿಳಿದವರಿಗೆಲ್ಲ ಪ್ರವಚನ ಮಾಡಿ ಇನ್ನೊಬ್ಬರಿಗೆ ತಿಳಿಸಿಕೊಡುವುದಕ್ಕೆ ಬರುವುದಿಲ್ಲ . ಸಮಾಜದಲ್ಲಿ ಅಂತಹ ಪಂಡಿತರು ಬೇಕಾದಷ್ಟು ಮಂದಿ ಇರುತ್ತಾರೆ ಅನ್ನುತ್ತಾನೆ ಭರ್ತೃಹರಿ. 

ಭಾರವಿಯ ಒಂದು ದೊಡ್ಡ ಮಾತು ಹೀಗಿದೆ :- " ಭವಂತಿ ತೇ ಸಭ್ಯತಮಾಃ ವಿಪಶ್ಚಿತಾನ್ ಮನೋರಥಂ ವಾಚಿ ನಿವೇಶಯಂತಿ" ಎಂದು. ಅಂದರೆ,

"ಯಾರಾದರೂ ತಮ್ಮ ಮನಸ್ಸಿನಲ್ಲಿದ್ದುದನ್ನು ತಿಳಿಯಾದ ಮಾತಿನಿಂದ ಇನ್ನೊಬ್ಬರಿಗೆ ಮುಟ್ಟಿಸಬಲ್ಲವರಾದರೆ, ಅವರೊಬ್ಬ ದೊಡ್ಡ ಕಲೆಗಾರರು.. ಅದೊಂದು ದೊಡ್ಡ ಕಲೆಗಾರಿಕೆ" ಅನ್ನುತ್ತಾನೆ ಪುರಾತನ ಕವಿ "ಭಾರವಿ".... ಆದ್ದರಿಂದ ಮಾತುಗಾರಿಕೆ ಎನ್ನುವುದು ಬೇರೆಯೇ ಕಲೆ...

ಇಂಥಹ ವಿಖ್ಯಾತರಾದ ವಿದ್ವಾಂಸರು ಯಾವ ರಾಜನ ರಾಜ್ಯದಲ್ಲಿ ಬಡವರಾಗಿ ಬದುಕುತ್ತಾರೋ, ಹಣವಿಲ್ಲದೆ ಒದ್ದಾಡುತ್ತಿರುತ್ತಾರೋ , ಅದು ಮೂರ್ಖರು ಆಳುವ ರಾಜ್ಯ ಅಥವಾ ದೇಶ... ಅದು ಆ ದೇಶದ ಅಥವಾ ಆ ರಾಜ್ಯದ ರಾಜನ ಮೂರ್ಖತನವನ್ನು , ಜಾಡ್ಯತನವನ್ನು ಪ್ರದರ್ಶಿಸುತ್ತದೆ...

ಭರ್ತೃಹರಿಯ ಈ ಶ್ಲೋಕವನ್ನು ನಾವಿರುವ ಈ ಕಾಲಘಟ್ಟಕ್ಕೆ ಹೋಲಿಸುವುದಾದರೆ, ಯಾವ ರಾಜ್ಯದಲ್ಲಿ , ಯಾವ ಆಡಳಿತದವು , ಆ ರಾಜ್ಯದ ದೊಡ್ಡ ವಿದ್ವಾಂಸರನ್ನು ಗುರುತಿಸದೆಒಬ್ಬನನ್ನು ಕೇವಲ ಯಾವ ಜಾತಿ, ಯಾವ ಪಂಗಡ, ಅನ್ನುವ ಜಾತಿವಾರು ವಿಭಾಗ ಮಾಡಿಕೊಂಡು ಹಣವನ್ನು ಹಂಚಿ, ಬಡತನದಿಂದ ಬದುಕುತ್ತಿರುವ ನಿಜವಾದ ವಿದ್ವಾಂಸರನ್ನು ದೂರ ಇಡುತ್ತಾನೋ, ಅದು ಅಂಥಹ ರಾಜ್ಯಾಡಳಿತದ ಮತ್ತು ಆ ರಾಜ್ಯದ ಮುಖ್ಯಮಂತ್ರಿಯ ಜಾಡ್ಯ ಮತ್ತು ಮೂರ್ಖತನವನ್ನು ಎತ್ತಿ ತೋರಿಸುತ್ತದೆ...

ಆದರೆ, ಅದರಿಂದ ನಷ್ಟ ಆ ದೇಶಕ್ಕೆ ಅಥವಾ ರಾಜ್ಯಕ್ಕೇ ಹೊರತು ಆ ವಿದ್ವಾಂಸನಿಗಲ್ಲ.. ಅನ್ಯಾಯ ಮಾಡಿದ ರಾಜ ಮೂರ್ಖನಾದ ಅಷ್ಟೇ. ಏಕೆಂದರೆ ದುಡ್ಡಿಲ್ಲದೆಯೂ ಜ್ಞಾನಿಗಳು ಎಂದೂ ಶ್ರೀಮಂತರೆ. ಅವರು ಯಾರಿಗೂ ಹೆದರದೆ, ದುಡ್ಡಿನ ಹಂಗಿಲ್ಲದೇ ಬದುಕಲು ಸರ್ವಸಮರ್ಥರು, ಪೂಜನೀಯರಾಗೇ ಬದುಕುವವರು...

ಭರ್ತೃಹರಿ ಒಂದು ಸುಂದರ ದೃಷ್ಟಾಂತದ ಮೂಲಕ ವಿದ್ವಾಂಸರ ಎತ್ತರವನ್ನು , ಗೌರವವನ್ನು ಎತ್ತಿ ಹಿಡಿಯುತ್ತಾನೆ...
ಪಂಡಿತರು ಎಂದರೆ, ಸ್ವಯಂ ಪ್ರಭೆ ಇರುವಂಥ ಒಂದು ವಜ್ರದ ಮಣಿಯಂತೆ... ಅಂಥಹ ಒಂದು ಮಣಿಯಿದೆ, ತುಂಬ ಬೆಲೆಬಾಳುವ ಮಣಿ ಅದು. ಆ ಮಣಿಯನ್ನು ಪರೀಕ್ಷಿಸಲು ಗೊತ್ತೇ ಇಲ್ಲದ ಪರೀಕ್ಷಕನಿಂದ, ಮಣಿಗೆ   ಕಡಿಮೆಬೆಲೆ ಕಟ್ಟಿದ ಮಾತ್ರಕ್ಕೆ , ಮಣಿ ತನಗಿರುವ ಮಹತ್ವವನ್ನು ಕಳೆದು ಕೊಂಡೀತೇ ?... ಎಂದೂ ಕಳೆದುಕೊಳ್ಳುವುದಿಲ್ಲ...

ಬೆಲೆ ಕಡಿಮೆ ಎಂಬ ನಿರ್ಣಯವಾಗಿದ್ದು ಮಣಿಯ ದೋಷವಲ್ಲ, ಬದಲಾಗಿ ಅದು ಕೆಟ್ಟ ಪರೀಕ್ಷಕನ ದೋಷ...
ಇದು ಕೇವಲ ಒಬ್ಬ ರಾಜನಿಗೆ ಮಾತ್ರ ಅನ್ವಯಿಸುವುದಷ್ಟೇ ಅಲ್ಲ , ಸಮಾಜದಲ್ಲಿ ಒಬ್ಬ ವಿದ್ವಾಂಸನನ್ನು, ಜ್ಞಾನಿಯನ್ನು  ಗುರುತಿಸದೆ ಇರುವ ಸಮಾಜದ ಜನಸಾಮಾನ್ಯರಿಗೂ ಅನ್ವಯವಾಗುವಂತದು...ಆಗ ಸಮಾಜ ಕೂಡ ಅಂಥಹ ವಿದ್ವಾಂಸನ ಜ್ಞಾನದಿಂದ ವಂಚಿತವಾಗುವಂತಾಗುತ್ತದೆ... ಹಾಗಾಗಿ ವಿದ್ವಾಂಸರನ್ನು ಕಡೆಗಾಣಿಸದೆ ಗೌರವಿಸಬೇಕಾದದ್ದು ಸಮಾಜದ ಕರ್ತವ್ಯವೂ ಆಗಿದೆ ಎಂಬುದು ಭರ್ತೃಹರಿಯ ಅಂತರಂಗದ ಅರ್ಥ ಕೂಡಾ ಹೌದು.

ಈ ಸಂದರ್ಭೋಚಿತ ಒಂದು ಗಾದೆ ಮಾತು ಕನ್ನಡದಲ್ಲಿ ಹೀಗೆ ಬಂದಿದೆ :

"ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ? ಎಂಬ ಗಾದೆ ಮಾತಿನಂತೆ...ವಿದ್ವಾಂಸರ ಮತ್ತು ವಿದ್ಯೆಯ ಹಿರಿಮೆಯನ್ನೇನು ಬಲ್ಲರು ಗುರುತಿಸಲಾಗದ ಅವಿವೇಕಿಗಳು)
🔹🔹🔹